ಯಾರ ಲಾಭಕ್ಕಾಗಿ ಈ ಸಮೀಕ್ಷೆ ?

ಕನ್ನಡದ ಒಂದು ಹೆಸರಾಂತ ದಿನಪತ್ರಿಕೆಯೆಂದು ತಮ್ಮನ್ನು ತಾವು ಕರೆದುಕೊಳ್ಳುವ ಕನ್ನಡ-ಪ್ರಭದವರು ಮೊನ್ನೆ ತಮ್ಮ ಪತ್ರಿಕೆಯ ಮುಖ-ಪುಟದಲ್ಲಿ "ತಾಯಿ ಕನ್ನಡತಿ, ಆದರೆ ಮಕ್ಕಳು...?" ಲೇಖನ ಮೂಡಿಸಿರುತ್ತಾರೆ. ಏನೀ ಲೇಖನ? ಕರ್ನಾಟಕದಲ್ಲಿ ಇವರು ಸಂದರ್ಶಿಸಿದ ಸುಮಾರು 6000 ಹೆಂಗಸರು (ತಾಯಂದಿರು) ತಮ್ಮ ಮಕ್ಕಳಿಗೆ ಒಳ್ಳೆಯ ಕಲಿಕೆ ಕೊಡಿಸಲು ಯಾವ ಭಾಷೆಯ ಮಾಧ್ಯಮವನ್ನು ಆಯ್ಕೆ ಮಾಡುತ್ತಾರೆ, ಮತ್ತೆ ಹಾಗೆ ಮಾಡಲು ಏನು ಕಾರಣಗಳು ಎಂಬ ಸಮೀಕ್ಷೆಯ ಫಲಿತಾಂಶ ಪ್ರಕಟಣೆ ಇದ್ದ ಹಾಗಿದೆ ಈ ಲೇಖನ.

ಇರಲಿ.. ಈ ಸಮೀಕ್ಷೆಯ ಕಡೆ ಗಮನ ಹರಿಸೋಣ. ಈ ಸಮೀಕ್ಷೆಯ ಕಾರ್ಯರೂಪ ನೋಡಿದರೆ ಬಹಳ ತಿಳಿಯಾಗಿ ಕಾಣುವ ವಿಷಯವೆಂದರೆ ಇವರು ಮೊದಲೇ ಒಂದು ಉತ್ತರವನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದು, ಅದನ್ನು ಜನರ (ತಾಯಂದಿರ) ಬಾಯಿಗಳಿಂದಲೂ ಬರುವಂತಹ ಪ್ರಶ್ನೆಗಳನ್ನು ಬುದ್ದಿ ಉಪಯೋಗಿಸಿ ಅವರ ಮನಸ್ಸುಗಳಲ್ಲಿ ಅದನ್ನು ಬಿತ್ತುವ ಕೆಲಸ ಮಾಡಿರುವ ಹಾಗಿದೆ. ಈ ಪ್ರಶ್ನೆ ಎಲ್ಲರ ಮನಸ್ಸಲ್ಲೂ ಅಡಗಿಯೇ ಇದ್ದರೂ ಇದನ್ನು institutionalize ಮಾಡುವ ಹುನ್ನಾರ ಸುದ್ದಿ ಮಾಧ್ಯಮದವರಾದ ಇವರದ್ದಾಗಿದೆ.


ಸುದ್ದಿ ಮಾಧ್ಯಮದ ಜವಾಬ್ದಾರಿ ನಿಭಾಯಿಸುವ ಹೆಸರಿನಲ್ಲಿ ಇದ್ದದ್ದನ್ನು ಇರುವ ಹಾಗೇ ಹೇಳಿ ಮುಗಿಸಿದ್ದಾರೆ ಹೊರತು, ಅವರೇ ಹೇಳಿಕೊಳ್ಳುವ ಹಾಗೆ ಸಮಾಜದ ಏಳಿಗೆಗಾಗಿ, ಉಜ್ವಲ ಭವಿಷ್ಯದತ್ತ ಕೆಲಸ ಮಾಡುವ ಜವಾಬ್ದಾರಿ ಇಲ್ಲಿ ತೋರಿಸಿರುವ ಹಾಗೆ ಕಾಣುತ್ತಿಲ್ಲ. ಇಂದು ಕನ್ನಡ ಏಟು ತಿಂದಿರುವ ತಾಯಿ, ತನ್ನ ಮಕ್ಕಳಿಗೆ ಅನ್ನ ಉಣಿಸಲು ಅವಳಿಗೆ ಆಗುತ್ತಿಲ್ಲವೆಂಬುದನ್ನು ಬಿಡಿಸಿ-ಬಿಡಿಸಿ ಹೇಳುತ್ತಿದ್ದಾರೆ. ಆದರೆ ಈ ತಾಯಿಗೆ ಮಲಾಮು ಹಚ್ಚಿ, ವಯಸ್ಸಿಗಿಂತ ಮುಂಚೆ ಸಾಯದೇ ಇರುವ ಹಾಗೆ ನೋಡಿಕೊಳ್ಳಲು ಜನ ಮುಂದಾಗಬೇಕು (ಯಾವ ರೀತಿಯಲ್ಲಿ) ಎಂದು ಕನ್ನಡದ "ತಾಯಂದಿರಿಗೆ" ಕಿವಿ ಮಾತು ಹೇಳಬಹುದಿತ್ತಲ್ಲವೇ ಈ ಮಾಧ್ಯಮದವರು? ಬದಲಾಗಿ ನಿಮ್ಮ ತಾಯಿಯನ್ನು ಈಗಲೇ ತ್ಯಜಿಸಿ, ಮತ್ತೊಂದು ತಾಯಿಯನ್ನು "ದತ್ತು" ಪಡೆಯಲು ದಾರಿ ತೋರಿಸುತ್ತಿದ್ದಾರಲ್ಲ ಇವರು?


ತಾಯ್ನುಡಿ ಮಕ್ಕಳಿಗೆ ಅತ್ಯುತ್ತಮ ಕಲಿಕೆ ಕೊಡಿಸಬಲ್ಲದು - ಇದು ಜಗತ್ತಿಗೇ ತಿಳಿದ ನಿಜ. ಇನ್ನು ಮಗುವಿನ ತಾಯ್ನುಡಿ ಕನ್ನಡವೇ ಇರಲಿ, ತಮಿಳೋ ತೆಲುಗೋ ಯಾವುದೇ ಭಾರತೀಯ ಭಾಷೆ ಇರಲಿ, ಇಂದು ಆ ಮಾಧ್ಯಮದಲ್ಲಿ ಕಲಿಕೆ ಹೆಚ್ಚು ಮುಂದುವರೆದಿಲ್ಲ ಎಂಬುದು ಗೊತ್ತಿರುವ ವಿಷಯ ಮತ್ತು ಆಯಾ ಭಾಷೆಯ ಜನ ಸಾಧ್ಯವಾಗಿಸಬೇಕಾದ ವಿಷಯವೂ ಹೌದು. ಇನ್ನು ಯಾವುದೇ ಪತ್ರಿಕೆಯೊಂದರ "ಸಲಹೆ"ಯನ್ನು ಆಧರಿಸಿ ತಂದೆ-ತಾಯಂದಿರು ತಮ್ಮ ಮಕ್ಕಳಿಗೆ ಯಾವ ಮಾಧ್ಯಮದ ಕಲಿಕೆ ಕೊಡಿಸಬೇಕು ಎಂಬುದನ್ನು ನಿರ್ಧರಿಸುವುದಿಲ್ಲ. ಆ ನಿರ್ಧಾರದ ಮೇಲೇನು ಈ ಪತ್ರಿಕೆಯ ಪ್ರಭಾವ ಇಲ್ಲದ ಮೇಲೆ, ಅನಾವಶ್ಯವಾಗಿ ಆ ವಿಚಾರದಲ್ಲಿ ಜನರನ್ನು ಮತ್ತೆ ಕೆಣಕುವ ಗುರಿಯೇನು? ಇವರಿಗೆ ಜನರ ಬಗ್ಗೆ ಕಾಳಜಿ ನಿಜವಾಗಿಯೂ ಇದ್ದರೆ ಅದನ್ನು long-term ಪರಿಹಾರಗಳತ್ತ ಕೈ-ಮಾಡುವ ಮೂಲಕ ತೋರಿಸಿದರೆ ಒಳಿತು. ಕನ್ನಡದ್ದೇ ಪತ್ರಿಕೆಯಾಗಿ ಇಂಗ್ಲಿಷ್ ಮಾಧ್ಯಮ ಕಲಿಕೆಯ ಸಲ್ಲದ ಗುಣಗಾನ ಮಾಡುವ ಮೂಲಕ ಜನರು ಇವರನ್ನು ನಂಬಬೇಕಾ ಎಂಬ ಪ್ರಶ್ನೆಗೆ ಸೊಪ್ಪು ಹಾಕಿದಂತಾಗಿದೆ, ಅಲ್ವಾ? ಇಂಗ್ಲಿಷ್ ಮಾಧ್ಯಮದ ಶಾಲೆಗಳು ಬೆಳೆಯುವುದಕ್ಕೂ ಕನ್ನಡ ದಿನಪತ್ರಿಕೆಯ ವ್ಯಾಪಾರ ಕುದುರುವುದಕ್ಕೂ ಸಂಬಂಧವೇನಾದರು ಕಂಡು ಕೊಂಡಿದ್ದಾರೆಯಾ ಈ ಪತ್ರಿಕೆಯವರು?


ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ಬದಲಾವಣೆ ಮೂಡಿಸಲು ಪತ್ರಿಕೆಗಳಿಗಿರುವ ಬಲ ಇವರುಗಳು ಅರ್ಥ ಮಾಡಿಕೊಂಡರೆ ಚಂದ. ಆ ದಿಕ್ಕಿನಲ್ಲಿ ಸಮಾಜದಲ್ಲಿ ಒಳ್ಳೆಯ ಬದಲಾವಣೆಗಳತ್ತ ದುಡಿಯುತ್ತಿರುವ ಕೈಗಳ ಬಲ ಇಮ್ಮಡಿಗೊಳಿಸುವ ಕೆಲಸವನ್ನಾದರೂ ಇವರು ಮಾಡಬಹುದಾಗಿದೆ.

0 comments

ನಿಮ್ಮ ಅನಿಸಿಕೆ ತಿಳಿಸಿರಿ: | Pass your comment: